ಇಲಾಖೆಯ ಬಗ್ಗೆ
1975 ರಲ್ಲಿ ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ವಿಶೇಷ ಗಮನಹರಿಸಲು ಕೇಂದ್ರ ಸರ್ಕಾರದಿಂದ ಟ್ರೈಬಲ್ ಸಬ್ ಪ್ಲಾನ್ (ಟಿ.ಎಸ್.ಪಿ) ರೂಪಿಸಲಾಗಿತ್ತು. ತದನಂತರ ಪರಿಶಿಷ್ಟ ಜಾತಿಯವರ ಅಭಿವೃದ್ದಿಗಾಗಿ ವಿಶೇಷ ಘಟಕ ಯೋಜನೆಯನ್ನು (ಎಸ್.ಸಿ.ಪಿ) ರೂಪಿಸಲಾಯಿತು. ಆಗಿನ ಕೇಂದ್ರ ಯೋಜನಾ ಆಯೋಗದ ಮಾರ್ಗಸೂಚಿಗಳಂತೆ ಯೋಜನಾ ವೆಚ್ಚದಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗನುಗುಣವಾಗಿ ಅನುದಾನವನ್ನು ಮೀಸಲಿಡಬೇಕಾಗಿತ್ತು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡದ ಜನಸಂಖ್ಯೆ ಆಧಾರದಲ್ಲಿ ಆಯವ್ಯಯವನ್ನು ಹಂಚಿಕೆ ಮಾಡಲು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟುಗಳ ಉಪ ಹಂಚಿಕೆ (ಯೋಜನೆ ರೂಪಿಸುವುದು,ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮವನ್ನು ಜಾರಿಗೆ ತರಲಾಯಿತು
ರಾಜ್ಯದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನಸಂಖ್ಯೆಯ ಪ್ರಮಾಣಕ್ಕನುಸಾರವಾಗಿ ರಾಜ್ಯ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಅನುದಾನವನ್ನು ಮೀಸಲಿಡಲಾಗುತ್ತದೆ
ಹಂಚಿಕೆ ಮಾಡಿರುವ ಮೊತ್ತವು ಖರ್ಚಾಗದೆ ಉಳಿದ ಸಂದರ್ಭದಲ್ಲಿ ಲೆಕ್ಕ ಪರಿಶೋಧನೆಯಾದ ಬಳಿಕ ಅದರ ಮುಂದಿನ ಹಣಕಾಸು ವರ್ಷಕ್ಕೆ ಸೇರ್ಪಡೆಯಾಗುತ್ತದೆ. ಈ ಅನುದಾನದಲ್ಲಿ 1/3 ಭಾಗ ಸಮಾಜ ಕಲ್ಯಾಣ ಇಲಾಖೆಗೆ ಹಾಗೂ 3/2 ಭಾಗ ಆಯಾ ಇಲಾಖೆಗೆ ಹಂಚಿಕೆಯಾಗುತ್ತದೆ. ಆದರೆ ಆ ವರ್ಷ ಮೀರಿದ ನಂತರ ಅದನ್ನು ಮುಂದುವರೆಸಲಾಗುವುದಿಲ್ಲ.
ಸರ್ಕಾರಿ ಅಧಿಕಾರಿ/ನೌಕರರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಅನುಷ್ಟಾನವಾಗುವ ಕಾರ್ಯಕ್ರಮಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದಲ್ಲಿ ಶಿಸ್ತುಕ್ರಮ/ ಕ್ರಿಮಿನಲ್ ಕ್ರಮಕ್ಕೆ ಒಳಪಡುತ್ತಾರೆ. ಪ್ರಶಂಸಾರ್ಹವಾದ ಕಾರ್ಯನಿರ್ವಹಣೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ.
ಪರಿಶಿಷ್ಟ ಜಾತಿ/ಪ.ಪಂಗಡದ ಫಲಾನುಭವಿಗಳಿಗೆ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸುವ ವೆಚ್ಚ - 100% SCSP/TSP ಯಲ್ಲಿ ಭರಿಸುವುದು. ನೇರ ಮತ್ತು ಪರಿಮಾಣಾತ್ಮಕ ಪ್ರಯೋಜನ
.
ಪ.ಜಾತಿ/ಪ.ಪಂಗಡದ ಜನಸಂಖ್ಯೆ ಅತೀ ಹೆಚ್ಚು ಇರುವ ಗ್ರಾಮಗಳ ಕಾಲೋನಿಗಳ ಅಭಿವೃದ್ಧಿ ಮತ್ತು ಇತರೆ ವಾಸಸ್ಥಳಗಳ ಅಭಿವೃದ್ಧಿಗೆ ತಗಲುವ ವೆಚ್ಚವನ್ನು ಭರಿಸುವುದು. ಸದರಿ ಗ್ರಾಮಗಳನ್ನು ಆದ್ಯತೆ ಮೇಲೆ Descending order ನಲ್ಲಿ ಆಯ್ಕೆ ಮಾಡುವುದು.
ಎಲ್ಲಾ ಜನರಿಗೆ ಉಪಯೋಗವಾಗುವ ಸಾಮಾಜಿಕ ವಲಯ (ಶಿಕ್ಷಣ, ಆರೋಗ್ಯ, ಮಹಿಳೆ, ಮಕ್ಕಳು, ಕಾರ್ಮಿಕ, ದೈಹಿಕ ವಿಕಲಚೇತನರು) ಯೋಜನೆಗಳಲ್ಲಿ ಪ.ಜಾತಿ/ಪ.ಪಂಗಡದ ಜನಸಂಖ್ಯೆಯ ಆಧಾರಕ್ಕನುಗುಣವಾಗಿ ವೆಚ್ಚ ಭರಿಸುವುದು.
ವಿಭಜಿಸಲಾಗದ ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸರ್ಕಾರವು ನಿರ್ಧರಿಸಬಹುದಾದ ಯೋಜನಾ ವೆಚ್ಚದ ಒಂದು ಭಾಗವನ್ನು ಅನುಸೂಚಿತ ಜಾತಿ/ಅನುಸೂಚಿತ ಪಂಗಡದ ಉಪಯೋಜನೆಗಳಲ್ಲಿ ಭರಿಸುವುದು.